ಮಾರ್ಚ್ 24, ಚಿತ್ರದುರ್ಗ: ಎಸ್.ಎಸ್.ಎಲ್.ಸಿ. ಪರೀಕ್ಷೆಯು ವಿದ್ಯಾರ್ಥಿಜೀವನದ ಪ್ರಮುಖ ಘಟ್ಟ ಮತ್ತು ಉತ್ತಮ ಭವಿಷ್ಯದ ಬುನಾದಿ. ಆದರೆ, ಪರೀಕ್ಷಾರ್ಥವಾಗಿ ತಯಾರಿ ನಡೆಸುವ ಮಕ್ಕಳು ಅತಂಕ, ಭಯಕ್ಕೊಳಗಾಗುವುದು ಸಹಜ. ಆದ್ದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ತಯಾರಿ ಬಗ್ಗೆ ಮಾರ್ಗದರ್ಶನ ಮತ್ತು ಉತ್ತೇಜನ ನೀಡುವ ಉದ್ದೇಶದೊಂದಿಗೆ ಚಿತ್ರದುರ್ಗದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ 10ನೇ ತರಗತಿ ಮಕ್ಕಳಿಗೆ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮಾತಾ ಚೈತನ್ಯಮಯಿ ಶ್ರೀ ಶಾರದಾ ಮಾತಾಜಿ ಪರೀಕ್ಷೆ ಬರೆಯುವ ಮಕ್ಕಳಿಗೆ ಆತಂಕ ಸಹಜವಾಗಿ ಇರುತ್ತದೆ. ಆದರೆ, ಅವುಗಳನ್ನು ಮನಸ್ಸಿನಿಂದ ತೆಗೆದು ಹಾಕಿ ಧೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದರು.
ಅವರು ಮುಂದುವರೆಸಿ, ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ಅಧ್ಯಯನ ಮಾಡಬೇಕು. ಪ್ರತಿನಿತ್ಯ ದೇವರ ಸ್ಮರಣೆ ಮಾಡುವುದರಿಂದ ಏಕಾಗ್ರತೆ ವೃದ್ಧಿಯಾಗುತ್ತದೆ ಹಾಗೂ ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡಿದಾಗ ಯಶಸ್ಸು ಲಭಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ಅತ್ಯಂತ ಅಮೂಲ್ಯವಾದದ್ದು. ಹೀಗಾಗಿ ಅಂತರ್ಜಾಲ, ಸಮೂಹ ಸಂವಹನಗಳಲ್ಲಿ ಕಾಲಹರಣ ಮಾಡದೇ ನಿಷ್ಠೆಯಿಂದ ಪರೀಕ್ಷೆಗೆ ಅಭ್ಯಾಸ ಮಾಡಬೇಕು. ತನ್ಮೂಲಕ ಸನಾತನ ಧರ್ಮ, ಸಂಸ್ಕೃತಿಯನ್ನು ಸಂರಕ್ಷಿಸುವಂತಹ ಪ್ರಬುದ್ಧ ಪ್ರಜೆಗಳಾಗಿ ಪ್ರತಿಯೊಬ್ಬರೂ ಬೆಳೆಯಬೇಕು ಎನ್ನುವ ಮೂಲಕ ವಿದ್ಯಾರ್ಥಿಗಳಿಗೆ ಸಮಯದ ಮಹತ್ತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಶ್ರೀ ಬಸವರಾಜ್, ಆಡಳಿತಾಧಿಕಾರಿ ಶ್ರೀ ಹನುಮೇಶ್ ಪದಕಿ ಮತ್ತು ಶ್ರೀ ರಾಜೀವಲೋಚನ್, ಶಿಕ್ಷಕರು ಮತ್ತು 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
https://www.facebook.com/rashtrotthanaparishath/
https://rashtrotthana.org/