
ಬೆಂಗಳೂರು, ಜುಲೈ 27: ಪ್ರೊ. ಸಾ. ಕೃ. ರಾಮಚಂದ್ರರಾಯರ ಜನ್ಮಶತಾಬ್ದ ಸಂಸ್ಮರಣಗ್ರಂಥ, ವಿದ್ಯಾಲಂಕಾರ ಹಾಗೂ ಅವರ ಸಂಗೀತ ರಚನೆಗಳನ್ನು ಸಂಪಾದಿಸಿದ ಕೃತಿ, ರಾಮಚಂದ್ರ ಕೃತಿಮಾಲವನ್ನು ಇಲ್ಲಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಲೋಕಾರ್ಪಣಗೊಳಿಸಲಾಯಿತು. ಕೃತಿಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯವು ಪ್ರಕಾಶಿಸಿದೆ.
ಪುಸ್ತಕದ Online ಖರೀದಿ ಕೊಂಡಿ:
ಕಾರ್ಯಕ್ರಮದ ವೀಡಿಯೋ:
https://www.youtube.com/live/_OuwaAm16M4?si=7Pj9avZjjAQvM0Wg
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಸಂಸ್ಮರಣಗ್ರಂಥದ ಸಂಪಾದಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಮನಶ್ಶಾಸ್ತ್ರಜ್ಞರು ಹಾಗೂ ರಾಮಚಂದ್ರರಾಯರ ಧರ್ಮಪತ್ನಿಯಾದ ಶ್ರೀಮತಿ ರಮಾ ರಾಮಚಂದ್ರರಾವ್, ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಉತ್ಥಾನ ಮಾಸಪತ್ರಿಕೆಯ ಗೌ. ಪ್ರಧಾನ ಸಂಪಾದಕರಾದ ನಾಡೋಜ ಎಸ್. ಆರ್. ರಾಮಸ್ವಾಮಿ, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶ್ರೀನಿವಾಸ ವರಖೇಡಿ, ಬಹುಶ್ರುತ ವಿದ್ವಾಂಸರು ಹಾಗೂ ಸಂಸ್ಮರಣಗ್ರಂಥದ ಸಂಪಾದಕರಾದ ಶತಾವಧಾನಿ ಡಾ. ಆರ್. ಗಣೇಶ್ ಹಾಗೂ ಪ್ರೇಕ್ಷಾ ಅಂತರ್ಜಾಲ ಪತ್ರಿಕೆಯ ಸಹಸಂಪಾದಕರು ಹಾಗೂ ಸಂಸ್ಮರಣಗ್ರಂಥದ ಸಂಪಾದಕರಾದ ಶ್ರೀ ಬಿ. ಎನ್. ಶಶಿಕಿರಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾಡೋಜ ಹಂ. ಪ. ನಾಗರಾಜಯ್ಯ, ಶ್ರೀ ಮಂಜುನಾಥ ಅಜ್ಜಂಪುರ, ಶ್ರೀ ಬಿ. ಪಿ. ಪ್ರೇಮಕುಮಾರ್, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ನಾ. ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕೃತಿಯನ್ನು ಪರಿಚಯಿಸುತ್ತಾ ಶತಾವಧಾನಿ ಡಾ. ಆರ್. ಗಣೇಶ್ ಅವರು “ರಾಮಚಂದ್ರರಾಯರು ಇದ್ದಾಗಲೇ ಇಂತಹ ಒಂದು ಕೃತಿಯನ್ನು ಅವರಿಗೆ ನೀಡಬೇಕೆಂಬ ವಿಚಾರದಿಂದ ಕೇಳಿದಾಗ ನನ್ನ ಗುರುಪಂಕ್ತಿಯವರಿಗೆ ಸಲ್ಲದ್ದು ನನಗೂ ಬೇಡ ಎಂದು ನಿರಾಕರಿಸಿಬಿಟ್ಟರು. ವಿದ್ಯಾಕ್ಷೇತ್ರ, ಜ್ಞಾನಕ್ಷೇತ್ರ, ಕಲಾಕ್ಷೇತ್ರ, ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಪಿತೃಸ್ಥಾನದಲ್ಲಿದವರು ಪ್ರೊ. ಸಾ. ಕೃ. ರಾಮಚಂದ್ರರಾಯರು. ತಾವು ಮಾಡಿದ್ದಕ್ಕೆ ಗೌರವಾದರ, ಪ್ರಶಸ್ತಿ ಪುರಸ್ಕಾರ ಅಪೇಕ್ಷಿಸದವರು ಅವರು. ಈ ಕೃತಿಯು ಅಧ್ಯಯನಪೂರ್ಣವಾದ, ರಾಮಚಂದ್ರರಾಯರ ಸಾಹಿತ್ಯ ಪ್ರಧಾನವಾದ ಹೆಜ್ಜೆಗುರುತುಗಳನ್ನು ನಮಗೆ ಕಾಣಿಸಿಕೊಡತಕ್ಕಂತಹ ಪ್ರಯತ್ನ. ಅವರ ಸಾಹಿತ್ಯಕಸೇವೆಯ ಗುಣಗಾತ್ರ ತುಂಬ ವ್ಯಾಪಕವಾದದ್ದು. ಅವರ ಸಾಹಿತ್ಯಕ ತಪಸ್ಸನ್ನು ಒಂದು ಪುಸ್ತಕದಲ್ಲಿ ತೂಕ ಮಾಡಿಡುತ್ತೇನೆ ಎನ್ನುವುದಕ್ಕೆ ಆಗುವುದಿಲ್ಲ. ಗುಣಗಾತ್ರದಲ್ಲಿ ವಿಸ್ತೃತವಾಗಿ ವೈವಿಧ್ಯದಲ್ಲಿ ಬೆರಗುಗೊಳಿಸುವಂತಹದ್ದಾಗಿರುವ ಅವರ ವಿದ್ವತ್ತನ್ನು ಒಂದು ಮುಷ್ಠಿಯಲ್ಲಿ ತಿಳಿದುಕೊಳ್ಳುವುದು ಕಷ್ಟ. ಇದು ಅವರ ಸಮಗ್ರಸಾಹಿತ್ಯದ ಒಂದು ಪಕ್ಷಿವೀಕ್ಷಣೆ.
ರಾಯರು ನಿರುಪಾಧಿಕರು. ವಿದ್ಯಾಲಂಕಾರ ಎಂದರೆ ನೆನಪಾಗುವುದು ರಾಮಚಂದ್ರರಾಯರು. ವಿದ್ಯಾಲಂಕಾರ ಎನ್ನುವ ಬಿರುದನ್ನು ಕೊಟ್ಟದ್ದು ವೀರಶೈವ ಪರಂಪರೆಯಲ್ಲಿ ದೊಡ್ಡ ಯತಿವರ್ಯರಾಗಿದ್ದ ಜಚನಿ ಎನ್ನುವ ಯತಿವರ್ಯರು.
ಈ ಕೃತಿ ಮೂರು ಭಾಗದಲ್ಲಿ ವಿಂಗಡನೆಯಾಗಿದೆ. ಒಟ್ಟುನೋಟದಲ್ಲಿ ರಾಮಚಂದ್ರ ರಾಯರ ಸಾಹಿತ್ಯವನ್ನು ಯಾವ ಪರಿಪ್ರೇಕ್ಷದಲ್ಲಿ ಗ್ರಹಿಸಬೇಕು ಎನ್ನುವದು ಈ ಭಾಗದಲ್ಲಿ ಇದೆ. ರಾಯರು ಪುನರುತ್ಥಾನದ ವ್ಯಕ್ತಿಗಳು. ಸಮಗ್ರವಾಗಿ ಎಲ್ಲವನ್ನೂ ನೋಡಬಲ್ಲಂತಹವರು. ಅವರ ವ್ಯಕ್ತಿತ್ವವನ್ನು ಕುರಿತಂತೆ 6 ಹಲವು ಲೇಖನಗಳಿವೆ. ಇಲ್ಲಿ ಹಲವು ಕಿರಿಯ ಲೇಖಕರೂ ಬರೆದಿದ್ದು ಅವರು ರಾಮಚಂದ್ರರಾಯರನ್ನು ಭೌತಿಕವಾಗಿ ನೋಡಿರದಿದ್ದರೂ ಅವರ ಸಾಹಿತ್ಯ ಇವರನ್ನು ಹೇಗೆ ತಟ್ಟಿದೆ ಎನ್ನುವುದು ಇಲ್ಲಿ ನಮಗೆ ಮನವರಿಕೆಯಾಗುತ್ತದೆ. ರಾಯರ ಕಲಾರಾಧನೆಯ ಆಯಾಮವನ್ನೂ ಸಹ ಇಲ್ಲಿ ಬಂದಂತಹ ಲೇಖನದಲ್ಲಿ ನಾವು ನೋಡಬಹುದು. 30ಕ್ಕೂ ಹೆಚ್ಚು ವ್ಯಕ್ತಿಚಿತ್ರಣದ ಕುರಿತು ಲೇಖನಗಳಿವೆ. ಅವುಗಳನ್ನು ನೋಡಿದಾಗ ಅವರ ಅಂತರಂಗ ಎಂಥದ್ದು ಎನ್ನುವದು ಅರ್ಥವಾಗುತ್ತದೆ. ಅವರ ಕಡೆಯ ದಿನಗಳನ್ನೂ, ಮಧ್ಯದ ದಿನಗಳನ್ನೂ ಹಾಗೂ ಎರಡು ಸಂದರ್ಶನಗಳ ಮೂಲಕ, ಮುಖ್ಯವಾಗಿ ರಾಯರ ಪತ್ನಿ ರಮಾ ಅವರ ಸಂದರ್ಶನದಿಂದ ನಮಗೆ ಅವರ ಯೌವನದ ಕಾಲ, ಅವರ ಬಾಲ್ಯ, ಅವರ ದೃಕ್ಕೋಣದ ಚಿತ್ರಣವೂ ಈ ಕೃತಿಯಲ್ಲಿ ದೊರಕುತ್ತದೆ.
ಕೃತಿತ್ವದ ಭಾಗದಲ್ಲಿ ಬಹುಮುಖ ಪ್ರತಿಭೆಯಾದ ರಾಯರ ವೇದಸಂಬಂಧಿ ಕಾರ್ಯಗಳು, ಅವರ ಆಯುರ್ವೇದ ಅನುಸಂಧಾನ, ಶ್ರೀವಿದ್ಯೆಗೆ ಸಂಬಂಧಿಸಿದ ಅವರ ಕಾರ್ಯಗಳು, ಬೌದ್ಧ ವಾಙ್ಮಯ ಇವೆಲ್ಲವೂ ಈ ಭಾಗದಲ್ಲಿ ನಮಗೆ ದೊರಕುತ್ತದೆ. ಇಲ್ಲಿನ ಯಾವುದೇ ಲೇಖನ ವ್ಯಕ್ತಿಪೂಜೆಯಾಗಿಲ್ಲ, ಅಂಧವಾಗಿ ಬರೆದಿದ್ದಲ್ಲ. ತಮಗೆ ಏನು ಕಂಡಿದೆಯೋ ಅದನ್ನಷ್ಟೇ ಬರೆದಿದ್ದಾರೆ. ರಾಯರ ಸಾಹಿತ್ಯವು ಗುಣಬಾಹುಳ್ಯವಾದದ್ದು, ಅತಿಶಯವಾದದ್ದು, ಇಲ್ಲಿನ ಕಿರಿಯ ಲೇಖಕರು ಬರೆದದ್ದು ನೋಡಿದಾಗ ವಿದ್ಯಾಕ್ಷೇತ್ರ ಬರಡಾಗಿಲ್ಲ ಎನ್ನುವ ಆಶಾವಾದ ಬರುತ್ತದೆ. ಶಾಸ್ತ್ರದಿಂದ ಕಲಾಕ್ಷೇತ್ರದವರೆಗಿನ ರಾಯರ ಬಹುಮುಖಿಯಾದ ಅಧ್ಯಯನಗಳಿಂದ ಸೇರಿಸಿಕೊಡುವ ಸಮಗ್ರದೃಷ್ಟಿ ನಮಗೆ ಇಲ್ಲಿ ದೊರಕುತ್ತದೆ ಎಂದು ಕೃತಿಯ ಕುರಿತು ಸಮಗ್ರ ಪರಿಚಯ ಮಾಡಿಕೊಟ್ಟರು.
ಕೃತಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಪ್ರೊ. ಮಲ್ಲೇಪುರ ಜಿ. ವೆಂಕಟೇಶ ಅವರು ಈ ಗ್ರಂಥಕ್ಕೆ ಅಸ್ಥಿಭಾರ ಹಾಕಿದ್ದು ಉತ್ಥಾನದ ವಿಶೇಷ ಸಂಚಿಕೆಯಾಗಿದ್ದು, ಸಾಕೃ ಅವರು ಸಾಮಾಜಿಕವಾಗಿ ಚೆನ್ನಾಗಿ ಬೆರೆಯುವ ವ್ಯಕ್ತಿತ್ವದವರಾಗಿದ್ದು, ಅವರ ಸರ್ವಾಂಶದ ಪ್ರತಿಭೆಗೆ ಯಾರಾದರೂ ಮರುಳಾಗಬೇಕಿತ್ತು. ಈ ಕೃತಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ರಾಯರ ಅಗಾಧತೆ ನಮ್ಮ ತರುಣ ಪೀಳಿಗೆಗೆ ಅರ್ಥವಾಗುತ್ತದೆ. ಇದೊಂದು ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಕೃತಿ ಎಂದರು.
ಕೃತಿಯನ್ನು ಲೋಕಾರ್ಪಣಗೊಳಿಸಿ ಮಾತನಾಡಿದ ಡಾ. ಶ್ರೀನಿವಾಸ ವರಖೇಡಿ ಅವರು ಸಾಕೃ ಅವರು ವಿದ್ಯಾಜೀವನರಾಗಿದ್ದವರು. ಅವರು ಸಂಸ್ಕಾರದಿಂದ ಮಾಧ್ವರಾಗಿದ್ದರೂ ಯಾವುದೇ ಸೀಮೆಗೆ ಒಳಪಡದವರಾಗಿದ್ದರು. ಆನಂದವನ್ನು ಕಲೆಯ ಮೂಲಕ ತಿಳಿಯಬಹುದು. ನಾವು ಉತ್ತಮ ಸಂಗೀತ ಕೇಳಿದಾಗ ಹೊರಗೆ ಹೋಗುವುದಿಲ್ಲ, ಒಳಗೆ ಹೋಗುತ್ತೇವೆ ಎಂದ ಸಾಕೃ ಅವರು ಆನಂದದ ಲೋಕದೊಳಗೆ ಹೋಗಲು ಎಲ್ಲ ಉಪಾಧಿಗಳನ್ನೂ ಕಳಚಿಕೊಂಡರು. ಉಪಾಧಿಗಳಿಂದ ಕಳಚಿಕೊಂಡಾಗ ನಮಗೆ ರಾಯರು ಅರ್ಥವಾಗುತ್ತಾರೆ. ಯುವ ವಿದ್ವಾಂಸರು ರಾಯರನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದೊಂದು ಮಾರ್ಗ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ನಾಡೋಜ ಎಸ್. ಆರ್. ರಾಮಸ್ವಾಮಿಯವರು ಮಾತನಾಡುತ್ತ, ಆ ಕುಟುಂಬದ ವಾತ್ಸಲ್ಯವನ್ನು 50ಕ್ಕೂ ಹೆಚ್ಚು ವರ್ಷಗಳಿಂದ ಪಡೆದಿದ್ದೇನೆ. ದೇಶದಲ್ಲೇ ಅತುಲ್ಯರಾಗಿದ್ದ ರಾಯರದು ಎಲ್ಲರಿಗೂ ಅತ್ಯಂತ ಸುಲಭಸಾಧ್ಯರಾಗಿದ್ದರು. ರಾಯರ ಸಾಧನೆಯ ಆಳ ಅಗಲ ವಿಸ್ಮಯವಾಗಿದ್ದು, ಅವರು ಮಾತು, ಬರಹ ಎರಡು ದಿಕ್ಕಿನಲ್ಲೂ ಸೌಲಭ್ಯ ಸಾಧಿಸಿದವರು. ಕಾಲದಿಂದ ಬಾಧಿತವಾಗದೇ ಉಳಿಯುವುದು ಗ್ರಂಥ. ರಾಯರು ಲೇಖನ, ಗ್ರಂಥ ಎರಡು ದಿಕ್ಕಿನಲ್ಲೂ ಸಾಧಿಸಿದರು. ಯಾವುದೇ ಬೇಡಿಕೆ ಯಾರಿಂದ ಬಂದರೂ ನಿರಾಕರಿಸಿದವರಲ್ಲ. ಶ್ರಮದಿಂದ ಗಳಿಸಿದ ಪಾಂಡಿತ್ಯಕ್ಕೆ ಗುರುದಕ್ಷಿಣೆ ನೀಡಲು ಸಾಧ್ಯವಾಗದ ರಾಯರಿಗೆ ಅವರ ಗುರುಗಳು ಗಳಿಸಿದ ಪಾಂಡಿತ್ಯವನ್ನು ಸಮಾಜಕ್ಕೆ ವಿತರಿಸು ಎಂದಂತೆ ಅವರ ಪಾಂಡಿತ್ಯ ಸಮಾಜಕ್ಕೆ ಒದಗಿಬಂತು. ತಮ್ಮ ವಿದ್ವತ್ತು ಸಮಾಜಕ್ಕೆ ಆಗಬೇಕು ಎನ್ನುವುದು ಅವರ ಬಯಕೆಯಾಗಿತ್ತು. ರಾಯರನ್ನು ಯಾರೂ ಯಾವುದಕ್ಕೆ ಬೇಕಾದರೂ ಆಶ್ರಯಿಸಬಹುದಾಗಿದ್ದು, ಎಲ್ಲ ಕ್ಷೇತ್ರದವರೂ ಆಶ್ರಯಿಸಬಹುದಾಗಿತ್ತು. ಬೇರೆಯವರಿಗೆ ಭಾರವಾಗದಂತೆ ಬದುಕಿದ ರಾಯರ ಮಾಧುರ್ಯವಾದ ಗೃಹಸ್ಥ ಜೀವನದ ಫಲಾನುಭವಿ ನಮ್ಮ ಸಮಾಜ. ಸಮಾಜಕ್ಕೆ ಅಗತ್ಯವಾದದ್ದನ್ನು, ಬೇಕಾಗಿದ್ದನ್ನು ದಶಕಗಳ ಕಾಲ ಮಾಡಿ ಯಶಃಕಾಲರಾದರು ಸಾಕೃ ರಾಮಚಂದ್ರ ರಾಯರು ಎಂದು ಅಭಿಪ್ರಾಯಿಸಿದರು.
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaSahitya #RashtrotthanaSahityaBooks #ramachandrarao
Project Info
- Category: News & Media
- Location: Bengaluru
- Completed Date: 27 July 2025